
ಮೊಬೈಲ್ ಮರಳಿಸಿದ ಆಟೋ ಚಾಲಕ
ಪ್ರಸ್ತುತ ಸಮಾಜದಲ್ಲಿ ಎಲ್ಲರಿಗೂ ಒಂದಿಲ್ಲೊಂದು ವಸ್ತುವಿನ ವ್ಯಾಮೋಹ ಇದ್ದೇ ಇರುತ್ತದೆ.ಅದರಲ್ಲೂ ಕಷ್ಟಪಡದೇ ಎಲ್ಲವೂ ಸಿಗಬೇಕೆನ್ನುವವರೇ ಹೆಚ್ಚು. ತನಗಿಷ್ಟವಾದ ವಸ್ತು ಅದು ಬೇರೆಯವರದ್ದಾಗಿದ್ದರೂ ಎತ್ತಿಟ್ಟುಕೊಳ್ಳುವವರೇ ಅಧಿಕ. ಇಂತಹ ಸಂದರ್ಭದಲ್ಲಿ ಪರರ ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸುವವರು ನಮ್ಮ ಮಧ್ಯೆ ಇಂದಿಗೂ ಇದ್ದಾರೆ ಎಂದರೆ ಆಶ್ಚರ್ಯವಾದರೂ ಸತ್ಯ.ಇಂತಹ ವ್ಯಕ್ತಿಯೊಬ್ಬರ ಪರಿಚಯ ಇಲ್ಲಿದೆ.
ಇವರು ಬೆಂಗಳೂರು ನಿವಾಸಿ ಆಟೋ ಚಾಲಕ ಜಾವೇದ್. ಇತ್ತೀಚೆಗೆ ಚಾಮರಾಜಪೇಟೆಯ ಶ್ರೀನಿವಾಸ ಎಂಬುವವರು ತಮ್ಮ ವಾಹನದಲ್ಲಿ ಕಾರ್ಯ ನಿಮಿತ್ತ ಹೊರಟಿದ್ದರು. ಈ ವೇಳೆ ಅವರಿಗೆ ಅರಿವಾಗದಂತೆ ಅವರ ಮೊಬೈಲ್ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ಗಮನಿಸಿದ ಆಟೋ ಚಾಲಕ ಜಾವೀದ್, ಮೊಬೈಲ್ ಕೈಗೆತ್ತಿಕೊಂಡಿದ್ದರು.ಅಷ್ಟರಲ್ಲಿ ಮಾಲೀಕರು ಸ್ಥಳದಿಂದ ಹೊರಟು ಹೋಗಿದ್ದರು. ಹಲವು ಗಂಟೆಗಳ ಕಾಲ ಜಾವೀದ್ ಬಳಿಯೇ ಮೊಬೈಲ್ ಇತ್ತು. ಸ್ಥಳದಲ್ಲಿದ್ದ ಕೆಲವರನ್ನು ವಿಚಾರಿಸಿದಾಗ ಅದು ನಮ್ಮ ಮೊಬೈಲ್ ಅಲ್ಲ ಎಂಬ ಮಾತುಗಳು ಕೇಳಿಬಂದವು.
ಕೆಲ ಗಂಟೆಗಳ ಬಳಿಕ ಸ್ವತಃ ಶೀನಿವಾಸ್ ಅವರೇ ಮೊಬೈಲ್ಗೆ ಕರೆ ಮಾಡಿದ್ದರು. ಅದನ್ನು ರಿಸೀವ್ ಮಾಡಿದ ಜಾವೀದ್, ನಿಮ್ಮ ಮೊಬೈಲ್ ನಮ್ಮ ಬಳಿ ಇದೆ. ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.
ಅದರಂತೆ ಜಾವೀದ್ ಬಳಿ ಬಂದ ಶ್ರೀನಿವಾಸ್ ಮೊಬೈಲ್ ಪಡೆದು ಚಾಲಕನಿಗೆ ಕೃತಜ್ಞತೆ ಸಲ್ಲಿಸಿದರು. ಅವರಿಬ್ಬರ ಧರ್ಮ ಬೇರೆಯಾದರೂ ಮತ್ತೊಬ್ಬರ ವಸ್ತುವಿಗೆ ಆಸೆ ಪಡಬಾರದು ಎಂಬ ತತ್ವ ಅವರದ್ದು. ಅಂತಹ ಚಾಲಕ ಜಾವೀದ್ ರೀತಿಯಲ್ಲಿ ನಾವೆಲ್ಲರೂ ಬದುಕು ಸಾಗಿಸಬೇಕಾಗಿದೆ. ಅಂದಾಗ ಮಾತ್ರ ಉತ್ತಮ ಕರ್ನಾಟಕದ ಕನಸು ನನಸಾಗುತ್ತದೆ.



Post a Comment