ಖಾನಾಪುರ: ಔಷಧೀಯ ಸಸ್ಯಗಳ ಆಗರ
ಬೆಳಗಾವಿ ಜಿಲ್ಲೆ ಅಪಾರ ಸಸ್ಯಸಂಪತ್ತು ಹೊಂದಿರುವ ಜಿಲ್ಲೆ. ಜಿಲ್ಲೆಯ ಖಾನಾಪೂರ ತಾಲೂಕು ಪಶ್ಚಿಮಘಟ್ಟದ ಸೆರಗಿನಲ್ಲಿ ಬರುವ ಪ್ರದೇಶ. ಅಪಾರ ಜೀವವೈವಿಧ್ಯತೆ ಇದರ ಮಡಿಲಲ್ಲಿದೆ. ಬಹುಪಯೋಗಿ ಔಷಧೀಯ ಗುಣಗಳುಳ್ಳ ಸಸ್ಯ ಸಂಕುಲ ಇಲ್ಲಿದೆ. ಇವುಗಳ ಮಹತ್ವ ಮತ್ತು ಇರುವಿಕೆ ಬಗ್ಗೆ ಅರಣ್ಯ ಇಲಾಖೆ ಇಷ್ಟರ್ಲಲೇ ಬೆಳಕು ಚೆಲ್ಲಲು ಸಮಗ್ರ ಯೋಜನೆ ಹಮ್ಮಿಕೊಳ್ಳಲಿದೆ. ಆ ಮೂಲಕ ಸಸ್ಯಸಂಪತ್ತಿನ ರಕ್ಷಣೆ, ಪೋಷಣೆ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ತಿಳಿಸಲು ಸಜ್ಜಾಗಿದೆ.
ಏನಿದರ ಉದ್ದೇಶ ?
ಅಪಾರ ವನೌಷಧಿ ಇಲ್ಲಿನ ಅರಣ್ಯದಲ್ಲಿದೆ. ಜತೆಗೆ ಸಾಂಬಾರು ಪದಾರ್ಥಗಳಿಗೆ ಬಳಸುವ ಸಸ್ಯಗಳು ಇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಮೌಲ್ಯ ಕೋಟ್ಯಂತರ ರೂ ಗಳದ್ದಾಗಿದೆ. ಆದರೆ ಸ್ಥಳೀಯ ಅರಣ್ಯವಾಸಿಗಳಿಗೆ ಇದರ ಲಾಭ ತಟ್ಟುತ್ತಿಲ್ಲ. ಇದರ ತಡೆಗೆ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಈ ಜೀವಸಂಪನ್ಮೂಲ ರಕ್ಷಕರಿಗೂ ಅದರ ಲಾಭ ತಲುಪಿಸುವ ಉದ್ದೇಶದಿಂದ ಜೀವವೈವಿಧ್ಯ ಕಾನೂನು-2002ನ್ನು ಜಾರಿ ತಂದಿದೆ. ಆದರೆ ಇದರ ಮಾಹಿತಿ ಹಲವರಿಗೆ ಗೊತ್ತೇ ಇಲ್ಲ.
ಯಾವು ಈ ಸಸಿಗಳು?
ದಾಲಚಿನ್ನಿ, ಆಕಾಶ (ಪಾನ್ ನಲ್ಲಿ ಬಳಸುವ ಕಾಚು), ಸಪ್ತರಂಗಿ( ಮಧುಮೇಹಕ್ಕೆ ಬಳಕೆ), ಮಾಫಿಯಾ ಫೆÇಟಿಡಾ(ಗುವಾಡಾ) ಸೇರಿದಂತೆ ಹಲವು ಔಷಧೀಯ ಗುಣಗಳುಳ್ಳ ಸಸ್ಯಗಳು ಇಲ್ಲಿನ ಅರಣ್ಯ ಪ್ರದೇಶದಲ್ಲಿವೆ. ಖಾನಾಪುರ ತಾಲೂಕಿನ ಪಡಲವಾಡಿಯಲ್ಲಿ ಪ್ರಸ್ತುತ ದೇಸಾಯಿ ಮನೆತನದವರು ಹಲವಾರು ವರ್ಷಗಳಿಂದ ಗ್ರಾಮದ ಸುತ್ತಲಿನ ಗಿಡದ ಸೊಪ್ಪನ್ನೇ ವಿವಿಧ ಕಾಯಿಲೆಗಳಿಗೆ ಔಷಧಿಯಾಗಿ ನೀಡುತ್ತ ಬಂದಿದ್ದಾರೆ.
ಸ್ಥಳೀಯರಿಗೆ ಮಾಹಿತಿ ಇಲ್ಲ
ಕರ್ನಾಟಕ ರಾಜ್ಯದಿಂದ ಸಾವಿರಾರು ಕೋಟಿ ರೂ. ಮೌಲ್ಯದ ಜೀವ ಸಂಪನ್ಮೂಲಗಳು ಪ್ರತಿವರ್ಷ ಹೊರಹೋಗುತ್ತಿವೆ. ಆದರೆ ಈ ಬಗ್ಗೆ ಗ್ರಾಮೀಣರಿಗೆ, ಸಮುದಾಯಗಳಿಗೆ, ಈ ಬಗ್ಗೆ ಪಾರಂಪರಿಕ ಜ್ಞಾನ ಹೊಂದಿರುವವರಿಗೆ ಯಾವುದೇ ಮಾಹಿತಿ, ಪ್ರಯೋಜನ ಇಲ್ಲದೆಯೇ ದೊಡ್ಡ ಕಂಪನಿಗಳು (ಸ್ವದೇಶಿ-ವಿದೇಶಿ) ಗರಿಷ್ಠ ಲಾಭ ಗಳಿಸುತ್ತವೆ. ಇದನ್ನು ತಪ್ಪಿಸಿ ಈ ಜೀವ ಸಂಪನ್ಮೂಲಗಳ ರಕ್ಷಕರಿಗೂ ಆರ್ಥಿಕ ಲಾಭ ಮಾಡಬೇಕೆನ್ನುವುದು ಜೀವವೈವಿಧ್ಯ ಕಾನೂನಿನ ನೂತನ ಅಧಿಸೂಚನೆಯ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.
ಕಾನೂನಿಗೆ ಬಲ
ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದಡಿಯ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಕೇಂದ್ರ ಸರಕಾರದ ಜೀವವೈವಿಧ್ಯ ಕಾನೂನು-2002ಕ್ಕೆ ಸಂಬಂಧಿಸಿ ಕಳೆದ ನವೆಂಬರ್ನಲ್ಲಿ ವಿಶೇಷ ಅಧಿಸೂಚನೆ ಪ್ರಕಟಿಸಿದೆ. ತನ್ಮೂಲಕ ಜೀವ ವೈವಿಧ್ಯತೆ ಸಂರಕ್ಷಣೆ- ಸಂವರ್ಧನೆಯ ಕಾನೂನು ನಿರ್ವಹಣೆಗೆ ಮತ್ತಷ್ಟು ಬಲ ಬಂದಂತಾಗಿದೆ. ಅಲ್ಲದೇ ಜೀವ ಸಂಪನ್ಮೂಲಗಳಿಂದ ಅದಕ್ಕೆ ಸಂಬಂಧಿಸಿದ ಕೆಳಹಂತದಲ್ಲಿ ಸಮಿತಿಗಳು ಹಾಗೂ ಜ್ಞಾನಹೊಂದಿದವರಿಗೂ ಆರ್ಥಿಕ ಲಾಭ ತಲುಪಿಸುವದನ್ನು ಕಡ್ಡಾಯ ಮಾಡಲಾಗಿದೆ.
ಯಾರಿಗೆ ಲಾಭ?
ಜೀವ ಸಂಪನ್ಮೂಲಗಳ ಕುರಿತು ಪಾರಂಪರಿಕ ಅಮೂಲ್ಯ ಜ್ಞಾನ ಭಂಡಾರ ಹೊಂದಿರುವ ಮತ್ತು ತಲೆತಲಾಂತರಗಳಿಂದ ಅದರ ರಕ್ಷಕ ರಾಗಿ ಬಂದಿರುವ ಹಳ್ಳಿಯ ಸಮುದಾಯಗಳಿಗೆ ಹಾಗೂ ಸಂಬಂಧಿಸಿದವರಿಗೆ ಹೊಸ ಜೀವವೈವಿಧ್ಯ ಅಧಿಸೂಚನೆಯಿಂದಾಗಿ ಆರ್ಥಿಕ ಲಾಭ ಬರಲಿದೆ. ತಳಹಂತದ ಹಳ್ಳಿಗರು, ಅರಣ್ಯವಾಸಿ ಅಧಿವಾಸಿಗಳು, ನಾಟಿವೈದ್ಯ, ಯುನಾನಿಯಲ್ಲಿ ಸಾಂಪ್ರದಾ ಯಿಕ ಜ್ಞಾನ ಹೊಂದಿರುವವರು, ಪಶು ವೈದ್ಯ ಕೀಯ, ಕೃಷಿ, ಮೀನುಗಾರಿಕೆ ಸಂಬಂಧಿಸಿ ಪರಿಸರದ ಜ್ಞಾನವುಳ್ಳವರು, ನೈಸರ್ಗಿಕ ಬಣ್ಣ ತಯಾರಿ ಸುವವರು, ಜೈವಿಕ ಕ್ರಿಮಿನಾಶಕ, ಹಿಂಡಿ ರಸ ತೆಗೆಯುವಿಕೆ, ನೈಸರ್ಗಿಕ ವಸ್ತು ಉತ್ಪಾದನೆ ಮಾಡಲು ಪಾರಂಪರಿಕ ಕೌಶಲ ಹೊಂದಿರುವವರು ಆರ್ಥಿಕ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ .
ನೂರಾರು ಟನ್ ಬಳಕೆ
ಜೀವವೈವಿಧ್ಯ ಅಧಿಸೂಚನೆ ಪ್ರಕಾರ ವಾಣಿಜ್ಯ ಉದ್ದೇಶಗಳಿಗಾಗಿ ಜೀವ ಸಂಪನ್ಮೂಲವನ್ನು ಸಂಗ್ರಹಿಸಿ ವ್ಯವಹರಿಸುವ ವ್ಯಾಪಾರಿಗಳು, ಗುತ್ತಿಗೆದಾರರು, ಸಗಟು ವ್ಯಾಪಾರಿಗಳು ಒಟ್ಟು ಖರೀದಿ ಮೌಲ್ಯದ ಶೇ.5 ರಷ್ಟನ್ನು ಸಂಬಂಧಿಸಿದವರಿಗೆ ಹಿಂದಿರುಗಿ ನೀಡಬೇಕಾಗುತ್ತದೆ. ಈ ವ್ಯಾಪ್ತಿಯಲ್ಲಿ ವ್ಯಕ್ತಿಗಳು ಮಾತ್ರವಲ್ಲದೇ ಸಮುದಾಯ, ಜೀವವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಮ ಅರಣ್ಯ ಸಮಿತಿ ಅಥವಾ ರಾಜ್ಯ ಜೀವವೈವಿಧ್ಯ ಮಂಡಳಿ ಸಹ ಸೇರಿರುತ್ತವೆ.
ಅರಣ್ಯ ಸಂಪತ್ತು ಪ್ರದೇಶದಿಂದ ವ್ಯಾಪಕ ಪ್ರಮಾಣದಲ್ಲಿ ಬೇರು, ಎಲೆ, ತೊಗಟೆ, ವನಸ್ಪತಿಗಳನ್ನು ಪ್ರತಿ ವರ್ಷ ಪಡೆಯಲಾಗುತ್ತಿದೆ. ಹೀಗೆ 425 ಸಸ್ಯ ಪ್ರಬೇಧಗಳಿಂದ ನೂರಾರು ಟನ್ ಗಳಷ್ಟು ಉತ್ಪನ್ನ ಸಂಗ್ರಹಿಸಿ ಔಷಧ-ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ ಎನ್ನುವದು ವಿಶೇಷ. ಸಂಗ್ರಹಿಸಿದ ಗಿಡಮೂಲಿಕೆಗಳಲ್ಲಿ ಆರೋಗ್ಯ ಟಾನಿಕ್ ಗೆ ಸುಮಾರು 87.45 ಟನ್ ಶತಾವರಿ, ಟ್ಯೂಮರ್, ಅಲ್ಸರ್, ಗಾಯಗಳ ನಿವಾರಣೆಗಳಿಗೆ ಅಶ್ವಗಂಧ, ಕೇಶವರ್ಧಿನಿ, ಡಯಾಬಿಟಿಕ್ಗಳಿಗೆ ನೆಲ್ಲಿಕಾಯಿ ಬಳಸಲಾಗುತ್ತದೆ.





Post a Comment