ಸದ್ಯ ಭಾರತದ ಸ್ಥಿತಿ ವಿಷಮಿಸುತ್ತಿದೆ. ಆಂತರಿಕ ತುಮುಲದಲ್ಲಿ ಸಿಲುಕಿ ನಲಗುತ್ತಿದೆ.
ಜಾತ್ಯತೀತತೆ ಹಾಗೂ ಮತೀಯಶಕ್ತಿಗಳ ಅಸಹನೆಯಿಂದ ತುಂಬಿ ತುಳುಕುತ್ತಿದೆ.ಬಡಜನರ ಶೋಷಣೆಗೆ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಜತೆಗೆ ಜಾತಿಯೂ ಕಾರಣವಾಗಿದೆ. ಜಾತಿ-ವರ್ಗ-ಅಂತಸ್ತು ಇವುಗಳನ್ನು ನಿರಾಕರಿಸುವ ಎಲ್ಲಾ ಸ್ಥಳದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದರಿಂದ ಸಂಪ್ರದಾಯವಾದಿಗಳ ಅರ್ಭಟ ಮುಗಿಲು ಮುಟ್ಟಿದೆ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಧ್ಯೆ ಅಪಾಯದ ದಿನಗಳು ಸಾಗುತ್ತಿವೆ. ಹಲವರ ಮೆದುಳು ಮತ್ತು ಹೃದಯಕ್ಕೆ ಕೋಮುವಾದಿ ವಿಷ ಲಗ್ಗೆಇಟ್ಟಿದೆ. ಇಂದಿಗೂ ಹಳ್ಳಿಗಳಲ್ಲಿ ಸಂಪ್ರದಾಯವಾದಿಗಳು ಮತ್ತು ಕೋಮುವಾದಿಗಳ ಶಕ್ತಿಗೆ ಅಮಾಯಕ ಮಹಿಳೆಯರು ಬಲಿಯಾಗುತ್ತಿದ್ದಾರೆ.
ಜನ ತಮ್ಮ ಮೂಲ ನೆಲೆಗಳಿಂದ ದೂರವಾಗುತ್ತಿದ್ದಾರೆ. ನಂಬಿಕೆ ವಿಶ್ವಾಸದ ಆಳದಲ್ಲಿ ಬಿರುಕು ಮೂಡಲಾರಂಭಿಸಿವೆ. ಕೊಲೆ-ಸುಲಿಗೆಗಳಿಲ್ಲದ ದಿನಗಳೇ ಇಲ್ಲದಂತಾಗಿದೆ.ಮಂದಿರ-ಮಸೀದಿ ನೆಪ ತೆಗೆದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಪ್ರೀತಿ-ಸಮಾನತೆಯ ಆಸೆಯಿಟ್ಟುಕೊಂಡವರ ಆಸೆ ಕಮರುತ್ತಿವೆ. ಮತಾಂಧರ ಕುಣಿತ ಎಲ್ಲಡೆ ಕಂಡು ಬರುತ್ತಿದೆ. ಖಾಸಗೀಕರಣ ಎಂಬ ಭೂತ ಒಳಹೊಕ್ಕಾಗಿದೆ. ಕಾಪೆರ್Çೀರೇಟ್ ಸೆಕ್ಟರ್ ಎಂಬ ವಿಷವರ್ತುಲದಲ್ಲಿ ಸಿಕ್ಕು ನರಳುತ್ತಿರುವ ನಾವು ನಮ್ಮ ಊರಲ್ಲೇ ಇರುವ ಸ್ಲಂ, ಗುಡಿಸಲುಗಳ ಜನರ ಹಸಿವಿನ ಆಕ್ರಂದನ ಹತಾಶೆಗಳನ್ನು ನೋಡುವ ಗೋಜಿಗೆ ಹೋಗುತ್ತಿಲ್ಲ.ನಮ್ಮ ಕಣ್ಣುಗಳಿಗೆ ಪೆÇರೆ ಕಟ್ಟಿದೆ. ಶೋಷಿತರ ಕೋಪತಾಪ, ಅವಮಾನ ಆಕ್ರೋಶಗಳೆಲ್ಲಾ ತಣ್ಣಗಾಗುತ್ತಿವೆ. ಪ್ರೀತಿ-ಸಮಾನತೆಗಳು ತಬ್ಬಲಿಗಳಾಗಿವೆ. ತಾರತಮ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಹೊರಬರಲಾದ ಸ್ಥಿತಿ ಇಂದಿಗೂ ಅನೇಕ ಸಮುದಾಯಗಳದ್ದಾಗಿದೆ.
ಶೋಷಿತ ಜನತೆಯ ಪರವಾದ ನಿಲುವನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವ ಸಾಮಾಜಿಕ ಪ್ರಜ್ಞೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಯತ್ನ ನಡೆದರೂ ಸಿಕ್ಕ ಬೆಂಬಲ, ಸಹಕಾರ ಅಷ್ಟಕ್ಕಷ್ಟೇ ಎಂದರೆ ತಪ್ಪಾಗದು. ಹೊಲದಲ್ಲಿ ನಳನಳಿಸುವ ಹಸಿರಿನ ಹಿಂದಿನ ಶ್ರಮಿಕರ ಬೆವರಿಗೆ ಬೆಲೆ ಇಲ್ಲದಂತಾಗಿದೆ. ಕೆಳವರ್ಗದ ಬದುಕಿನ ಲಯ ತಪ್ಪಿದೆ. ಅವರ ನಿಟ್ಟುಸಿರಿನ ಹಿಂದಿರುವ ದಾರುಣತೆ ಅರ್ಥೈಸಿಕೊಳ್ಳದ ಜಮೀನ್ದಾರರೇ ಹೆಚ್ಚಿರುವ ನಮ್ಮ ಈ ವ್ಯವಸ್ಥೆ ಬಹು ದೊಡ್ಡ ವಿಪರ್ಯಾಸವೇ ಸರಿ. ಅನ್ಯಾಯ, ಅಸಮಾನತೆಯ ಹಲವು ಆಯಾಮಗಳು ಇಂದಿಗೂ ಜಾರಿಯಲ್ಲಿದ್ದು ಸಾಮಾಜಿಕ ಕುರೂಪತೆಗೆ ಸಾಕ್ಷಿಯಾಗಿವೆ. ದರ್ಪದ ಅಟ್ಟಹಾಸದಿಂದ ನಲುಗುತ್ತಿರುವ ಜನ ಇಂತಹ ಕ್ರೂರ ವ್ಯವಸ್ಥೆಯಲ್ಲಿ ಸಿಕ್ಕು ಪರಿತಪಿಸುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನವಾಗುತ್ತಿದೆ ಎನೋ ಎಂಬ ಆತಂಕ ಹಲವರನ್ನು ಕಾಡುತ್ತಿದೆ. ಹಣದ ಹಿಂದೆ ಬಿದ್ದಿರುವ ನಾವು ಸಹಬಾಳ್ವೆಯಿಂದ ವಿಮುಖರಾಗಿದ್ದೇವೆ. ಎಲ್ಲೆಲ್ಲೂ ಜಾತಿ, ಮತದ ಅಬ್ಬರ ಕಾಣುತ್ತಿದ್ದೇವೆ. ಬಡವ ಬಲ್ಲಿದರ ಮಧ್ಯೆಯ ಅಂತರ ಹಾಗೆಯೇ ಇದೆ. ವೋಟ್ ಬ್ಯಾಂಕ್ ರಾಜಕಾರಣದ ಪ್ರತಿಫಲವಾಗಿ ಪ್ರತ್ಯೇಕತೆಯ ಬೆಂಕಿಯಲ್ಲಿ ಹಲವು ರಾಜ್ಯಗಳು ಉರಿಯುತ್ತಿವೆ. ಮಿತಿಮೀರಿದ ಇಂಗ್ಲೀಷ್ದಾಹದಿಂದ ಮಾತೃಭಾಷಾ ಶಿಕ್ಷಣ ಮಾಧ್ಯಮ ಹದಗೆಟ್ಟ ಹೈದರಾಬಾದ್ ಆಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಗಲುದರೋಡೆಗಿಳಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಪಾರ ಬಲು ಜೋರಾಗಿಯೇ ಸಾಗಿದೆ.ಇವರ ಹಿತಕಾಯುವ ಸರಕಾರ ಶ್ರೀ ಸಾಮಾನ್ಯನ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕೆಸರಾದ ಕೈಗಳಿಗೆ ನೆಲೆ ಕೇಳುವುದೇ ಒಂದು ದೊಡ್ಡ ಅಪರಾಧವಾಗುತ್ತಿದೆ.ಜಮೀನ್ದಾರಿಕೆ ಮತ್ತು ವತನ್ದಾರಿಕೆ ಪೂರ್ಣಪ್ರಮಾಣದಲ್ಲಿ ಇಂತೂ ನಿಂತಿಲ್ಲ. ವ್ಯವಸ್ಥೆಯ ಬದಲಾವಣೆಯ ಮಾತು ಬರೀ ಮಾತಾಗಿಯೇ ಉಳಿದಿದೆ. ಬಡತನದ ನೋವಿನ ಜತೆ ಸಿರಿತನದ ಮಧ್ಯದ ವ್ಯತ್ಯಾಸ ಹುಡುಕುವ ಮನಸ್ಸುಗಳು ಎಲ್ಲೋ ಧೃತಿಗೆಟ್ಟಿವೆ. ಭವಿಷ್ಯದ ನೆಲೆ ಕಂಡುಕೊಳ್ಳುವ ಭರದಲ್ಲಿ ಸ್ವಾರ್ಥಕ್ಕೆ ಸಿಕ್ಕ ಶೋಷಿತ ಸಮಾಜದ ನಾಯಕರೂ ರಾಜಕಾರಣಿಗಳ ಬಾಲಂಗೋಚಿಯಾಗುತ್ತಿರುವುದು ವಿಷಾದವೇ ಸರಿ. ಸಮಯಸಾಧಕರೇ ತುಂಬಿ ತುಳುಕುತ್ತಿದ್ದು ಹೊಗಳಿಕೆ, ಜನಪ್ರಿಯತೆಗೆ ಜೋತುಬಿದ್ದ ಗುಳ್ಳೇನರಿ ಬುದ್ಧಿಯ ಜನರು ಎಲ್ಲೆಡೆ ಕಂಡುಬರುತ್ತಾರೆ. ವ್ಯವಸ್ಥೆಯ ಅಮಲೇರಿದ ಪರಿಣಾಮ ಮನುಷ್ಯತ್ವ ಮರೆಯಾಗಿದೆ.ತುಳಿತಕ್ಕೊಳಗಾದವರ ಪರ ಧ್ವನಿ ಏನೋ ಮೊಳಗಿದೆ ಆದರೆ ಗಟ್ಟಿಯಾಗಿಲ್ಲ. ಧಾರ್ಮಿಕ ಮೌಢ್ಯ ತಾಂಡವವಾಡುತ್ತಿದೆ. ದೇಶ, ಸಂಸ್ಕøತಿ, ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವ ಯತ್ನ ನಿರಂತರವಾಗಿ ಸಾಗಿದೆ.
ನಾವಿಂದು 21 ನೇ ಶತಮಾನದಲ್ಲಿದ್ದೇವೆ . ಇದೊಂದು ಅತ್ಯಾಧುನಿಕ ಯುಗ ಹಾಗೆ ಹೀಗೆ ಎಂದೆಲ್ಲಾ ಬಡಾಯಿ ಕೊಚ್ಚಿಕೊಂಡರೂ ತಾರತಮ್ಯದ ರೋಗಕ್ಕೆ ಮದ್ದು ಕಂಡುಹಿಡಿಯಲಾಗಿಲ್ಲ.ಜನಪ್ರತಿನಿಧಿಗಳು ಎಂದೆನಿಸಿಕೊಂಡವರು ಜನರ ಮಾತಿನ ಪ್ರತಿನಿಧಿಗಳಾಗದೇ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಇನ್ನೊಂದೆಡೆ ಪಶುವಿನ ಥರ ದುಡಿದರೂ ಸಂಸಾರ ಸಾಗಿಸಲಾಗದ ಕುಟುಂದಸ ಸದಸ್ಯರ ಹೊಟ್ಟೆ ತುಂಬಿಸಲಾರದ ಅಸಹಾಯಕರು ಇಂದಿಗೂ ಕಂಡು ಬರ್ತಿದ್ದಾರೆ.ಕಡುಬಡತನ ಇವರು ಗಳಿಸಿದ ಆಸ್ತಿ.ಇವರ ಮತಗಳ ಮೇಲೆ ಹಲವರ ಕಣ್ಣು.ಬ್ರಿಟೀಷರ ದಾಸ್ಯದಿಂದ ಮುಕ್ತಿ ಕಂಡರೂ ಜಾತಿವ್ಯವಸ್ಥೆ ಕಪಿಮುಷ್ಠಿಯಿಂದ ಹೊರಬರಲಾಗದ ಸ್ಥಿತಿ. ಅಸಮಾನತೆಯ ಕೊಳಕು ಬಳ್ಳಿ ಎಲ್ಲೆಡೆ ಹಬ್ಬಿದೆ. ಹೋರಾಟಗಳ ಶಕ್ತಿ ಕ್ಷೀಣಿಸುತ್ತಿದೆ. ಅಲ್ಲೂ ಸ್ವಾರ್ಥ ನಾಯಕರಿಂದಾಗಿ ಹೋರಾಟದ ದಿಕ್ಕುದೆಸೆ ಬದಲಾಗುತ್ತಿದೆ.ರೈತ ಪರ ಕಣ್ಣೀರು ಹಾಕುತ್ತಲೇ ಒಳಗೊಳಗೆ ಬುಕ್ ಆಗುವ ನಾಯಕರು ಸಾಕಷ್ಟಾಗಿದ್ದಾರೆ. ಶೋಷಿತರ ಬವಣೆಗಳಿಗೆ ಸ್ಪಂದಿಸುವ ನಾಯಕರನ್ನು ದೀಪ ಹಚ್ಚಿ ಹಡುಕಬೇಕಾದ ಪರಿಸ್ಥಿತಿ ಎದುರಾಗಿದೆ.ಶರಣಾಗತಿ ಸಲ್ಲದು ಹೋರಾಟ ನಿಲ್ಲದು ಎಂದೆಲ್ಲಾ ಕೊಚ್ಚಿಕೊಂಡರೂ ವಾಸ್ತವವಾಗಿ ನಡೆಯುತ್ತಿರುವ ಹೋರಾಟಗಳ ಸ್ವರೂಪ ಮತ್ತು ಸಾಮಥ್ರ್ಯ ನೋಡಿದರೆ ಸಾಕು ತಿಳಿದುಬರುತ್ತದೆ.




Post a Comment